ಹೊಸ ಕನಸು ಕಂಡು ಮೂರು ವರ್ಷಗಳು...!
- Abhishek thirthahalli
- Jun 21, 2020
- 2 min read
ಎನೋ ಕುತೂಹಲಕಾರಿ ಭಯದ ವಾತಾವರಣದಲ್ಲೇ ಎದ್ದು ಕಿಟಕಿಯತ್ತ ಕಣ್ಣುಹಾಯಿಸಿದ್ದೆ. ಉದಯಿಸಿರುವ ಸೂರ್ಯನಿಗೂ ಭೂಮಿಯ ಮೊಗವ ನೋಡಲು ನಾಚಿಕೆಯೆಂಬಂತೆ ಅರೆಬರೆ ಕಣ್ಣ್ ಹೊಡೆದ ಸೂರ್ಯ ಮೋಡದ ಮರೆಯಿಂದ ಕಿರಣವ ಹೊಮ್ಮಿಸುತ್ತಿದ್ದ... ಮುಸುಕಿರುವ ಮಬ್ಬಿನಲಿ ನಾ ನಿನ್ನ ತಬ್ಬಿಕೊಳ್ಳಲೇನೋ ಎನ್ನುವ ಗೆಳತಿಯಂತೆ ಸುತ್ತಲೆಲ್ಲಾ ಮಂಜು ಮುಸುಕಿತ್ತು...ಮನದಲ್ಲಿ ಎನೋ ತಿಳಿಯದ ಗಲಭೆ, ಇದುವರೆಗೂ ಕಂಡರಿಯದ ಕುತೂಹಲ, ಜೀವನದ ಇನ್ನೊಂದು ಮೆಟ್ಟಿಲನ್ನು ಹತ್ತಲು ಸಜ್ಜಾಗುವ ದಿನವೆಂದು ಮನಸ್ಸು ಮೆಲ್ಲನೆ ತಿಳಿಸಲಾರಂಭಿಸಿತು. ಅರಿತು,ಬೆರೆತು, ಮರೆತು, ಕಲಿತ, ನೋವು, ನಲಿವು, ಆಟ, ಪಾಠ, ಬದುಕು,ಬವಣೆ, ನಾನು,ಸ್ನೇಹ, ನೀನು, ಮಾತ್ರ, ಪ್ರೀತಿ ಗೀತಿ ಇತ್ಯಾದಿ...! ಇವೆಲ್ಲವನ್ನೂ ಪಡೆದ ಡಿಗ್ರೀ ಜೀವನಕ್ಕೆ ಕಾಲಿಡುವ ಹೊತ್ತು..
ಕೊಡೆ ಹಿಡಿದು ನಡೆದರೆ ಮುಜುಗರವೆಂದೋ ಏನೋ ಹಾಗೆಯೇ ತುಸು ನೆಂದು ಕಾಲೇಜು ಗೇಟಿನ ಎದುರು ನಿಂತಿದ್ದಾಯ್ತು... ಅಬ್ಬಾ..! ಈ ಮೊದಲು ನಾನು ಕಾಲೇಜಿಗೆ ಭೇಟಿ ನೀಡಿದ್ದರು ಕೂಡ ಅಂದೇಕೋ ನನ್ನನ್ನು ಕಾಲೇಜು ಬಹಳ ಗಾಬರಿಗೊಳಿಸಿದ್ದಂತೂ ನಿಜ.ಭಯದಲ್ಲೇ ಹೆಜ್ಜೆಯಿಡುತ್ತ ಮೊದಲು ಗಮನಿಸಿದ್ದೇ ಕಾಮಗಾರಿ ಪ್ರಗತಿಯಲ್ಲಿದ್ದೂ ಕೆಂಪುಕೋಟೆಯಂತೆ ರಾರಾಜಿಸುತಿದ್ದ ರವೀಂದ್ರ ಕಲಾಭವನ..ಹೆಹ್ಹೇ ಕೆಂಪುಕೋಟೆ ಎಂದಾಗಲೇ ನನ್ನ ಕಾಲೇಜು ಯಾವುದೆಂದು ನಿಮಗೆ ತಿಳಿದಿರಬಹುದು ಅಲ್ಲವೇ!? ಹೌದು ಜನಮನಸ್ಸಿನಲ್ಲಿ ಕೆಂಪುಕೋಟೆಯೆಂದೇ ಹೆಸರುವಾಸಿಯಾಗಿರುವ ಮಂಗಳೂರಿನ ಯುನಿವರ್ಸಿಟಿ ಕಾಲೇಜು. (ಹಳೆಯ ಸರಕಾರಿ ಕಾಲೇಜು).. ಹಾಗೆಯೇ ಕಾಲೇಜು ಪ್ರವೇಶಿಸಿದ ನನಗೆ ಇನ್ನೊಮ್ಮೆ ಗಾಬರಿಗೊಳಿಸಿದ್ದು ಕಾಲೇಜು ಕುವರಿಯರು. ಎಲ್ಲಿ ನೋಡಿದರೂ ಒಬ್ಬ ಗಂಡು ಮಗ ಕಾಣುವುದಿಲ್ಲವಲ್ಲ! ಅಲ್ಲಾ ಇಂದು ಕೇವಲ ಹುಡುಗಿಯರಿಗೆ ಮಾತ್ರ ತರಗತಿಗಳಾ ಎಂಬ ಸಂಶಯದೊಡನೇ ಸಾಗಿದಾಗ ಅಲ್ಲೊಬ್ಬ ಇಲ್ಲೊಬ್ಬ ಮೀಸೆಮಾವಂದಿರನ್ನು ನೋಡುವಾಗ ಏನೋ ಧೈರ್ಯ,ಇವನು ನನ್ನ ತರಗತಿಯವನಾ , ಮುಂದಿನ ನನ್ನ ಸ್ನೇಹಿತನಾ ಎಂದೆನುತ್ತಲೇ ಕಾಲೇಜು ರಂಗಮಂದಿರದ ಬಳಿ ನಿಂತುಕೊಂಡೆ. ಹೊಸ ಕನಸು ಕಂಡು ಇಂದಿಗೆ ಮೂರು ವರ್ಷಗಳಾಗಿವೆ!!! ನಾನೇನೆಂಬುದು ನನಗೆ ತಿಳಿದಿಲ್ಲ, ನಾ ಮಾಡಬೇಕಾದುದುರ ಪರಿಚಯವೂ ಇಲ್ಲ, ಇಲ್ಲಿ ಯಾರೊಬ್ಬರಿಗೂ ನನ್ನ ಪರಿಚಯವಿಲ್ಲ. ಎಲ್ಲೋ ಓದಿದ ನೆನಪು. ನೀ ಜೀವನದಲ್ಲಿ ಎಷ್ಟು ಹೆಜ್ಜೆಗಳನ್ನು ಇಡುತ್ತೀಯೋ ಎಂಬುದು ಮುಖ್ಯವಲ್ಲ ಬದಲಾಗಿ ಆತ್ಮವಿಶ್ವಾಸದಿಂದ ನೀನಿಡುವ ಮೊದಲ ಹೆಜ್ಜೆಯೇ ಮುಖ್ಯವಾಗಿರುತ್ತದೆ ಎಂದು. ಇದನ್ನೇ ಮನಸಲ್ಲಿಟ್ಟುಕೊಂಡು ಹೊಸತೊಂದು ಜೀವನ ಶೈಲಿಯೊಂದಿಗೆ ಕಾಲೇಜಿನ ಪಯಣವನ್ನು ಆರಂಭಿಸಿದೆ. ನನ್ನ ಪರಿಚಯವಿಲ್ಲದ ಈ ಭವ್ಯ ಕಾಲೇಜಿಗೆ, ನನ್ನ ಸಹಪಾಠಿಗಳಿಗೆ, ನಾ ಇಲ್ಲಿಂದ ತೆರಳುವಾಗ ನಾನು ಎಲ್ಲರಿಗೂ ಚಿರಪರಿಚಿತನಾಗಿರಬೇಕೆಂದು ಅಂದೇ ಮನಸು ಯೋಚಿಸಿತ್ತು.
ವಾಣಿಜ್ಯ ವಿಭಾಗದ ಕೊಠಡಿ ಸಂಖ್ಯೆ 37 ನನ್ನ ಮೊದಲ ತರಗತಿಯಾಗಿತ್ತು. ಅಯ್ಯೋ ದೇವಾ... ತರಗತಿ ತುಂಬಾ ಹುಡುಗಿಯರೇ ಅಕ್ರಮಿಸಿಬಿಟ್ಟಿದ್ದಾರಲ್ಲಾ ಎಂದು ಹಾಗೆಯೇ ಕಾರಿಡಾರ್ ನಲ್ಲಿ ನಿಂತುಬಿಟ್ಟೆ. ಸಮಯ ಕಳೆದ ಬಳಿಕ ಒಬ್ಬೊಬ್ಬರಾಗಿ ಗಂಡುಗಲಿಗಳ ಆಗಮನ!! ನಾ ಮೊದಲು ಮಾತನಾಡಿಸಿದ್ದು ಗಂಟು ಮೂತಿ ಕಟ್ಟಿಕೊಂಡು ಬೆಪ್ಪಾಗಿದ್ದ ನೆಚ್ಚಿನ ಗೆಳೆಯ ಮಾಲ್ತೇಶನನ್ನು. ಸದಾ ನಮ್ಮೆಲ್ಲರನ್ನೂ ಆಡಿಸಿಕೊಂಡು, ನಗಿಸಿಕೊಂಡಿದ್ದ ಅವನೇಕೆ ಹಾಗಿದ್ದ ಎಂಬುದು ಇಂದಿಗೂ ನಿಗೂಢವೇ ಸರಿ. ಅದಾದಮೇಲೆ ಎಲ್ಲರ ಪರಿಚಯ ಮಾಡಿಸಿಕೊಂಡಿದ್ದೂ ನಾನೇ ಮೊದಲು , ಪ್ರಕಾಶ್ , ಚೇತನ್, ನೇಹಲ್, ಧನರಾಜ್, ದೀಪಕ್, ಫ್ಲಾಯಿಡ್, ಧನುಷ್,ಮಂಜುನಾಥ್, ನೌಷದ್, ಕುಮಾರ, ಮಂಜುನಾಥ, ಲಾಲು ಪ್ರಸಾದ್, ಕಬೀರ್ ,ಹ್ಯಾರೀಸ್,ರಶದ್ ಎಂಬ ಹೊಸ ಪರಿಚಯದ ಸ್ನೇಹಿತರು. ಅದರೆ ತರಗತಿಯಲ್ಲಿ ಹುಡುಗಿಯರೇ ಅವರಿಸಿದ್ದು ನಾವು ತರಗತಿ ಪ್ರವೇಶಿಸುವುದು ತಡವಾಗಿತ್ತು. ಆದರೂ ನಾವೆಲ್ಲರೂ ಮಾತನಾಡಿಕೊಂಡು ಮಾಸ್ ರೀತಿಯಲ್ಲಿ ತರಗತಿಗೆ ಎಂಟ್ರಿ ಕೊಟ್ಟಿದ್ದ ನೆನಪು ಮಾತ್ರಾ... ವ್ಹಾ ವ್ಹಾ ವ್ಹಾ...!! ( ಮನಸಲ್ಲಿ ಹೀರೋ ರೆಂಜಿಗೆ ಬಿಲ್ಡಪ್ ಕೂಡ ಇತ್ತೂ ) ಒಬ್ಬರ ಹಿಂದೆ ಒಬ್ಬರಾಗಿ ಒಳಗೆ ಹೋದೆವು, ಹುಡುಗರ ಅಚ್ಚರಿಯ ಪ್ರವೇಶವನ್ನು ನೋಡಿ ಬೆರಗಾದ ಕಾಲೇಜು ಕಣ್ಮಣಿಗಳು ಎಂದು ಹೆಡ್ಲೈನ್ಸ್ ಕೊಡಬಹುದಿತ್ತೇನೋ ಎಂಬಂತೆ ದೊಡ್ಡ ದೊಡ್ಡ ಕಣ್ಣುಬಿಟ್ಟು ನೋಡುತ್ತಿದ್ದರು ತರಗತಿ ಹುಡುಗಿಯರು..!! ಹಾಗೇ ಹೀಗೇ ಹೇಗಿದ್ದರೂ 5 ವರ್ಷಗಳಿಂದಲೂ ನನಗೂ ಲಾಸ್ಟ್ ಬೆಂಚಿಗೂ ನಂಟಿತ್ತು ಎಂಬ ಕಾರಣದಿಂದಲೇ ಹೊಸ ಸ್ನೇಹಿತರೊಂದಿಗೆ ಹೊಸ ತರಗತಿ ಪ್ರವೇಶಿಸಿದ ನಾನು ಇಲ್ಲಿಯೂ ಆಯ್ಕೆ ಮಾಡಿದ್ದು ಕೊನೇಯ ಬೆಂಚನ್ನೇ... ಈಗ ಸತತವಾಗಿ 8 ವರ್ಷಗಳ ಕಾಲ ಲಾಸ್ಟ್ಬ್ ಬೆಂಚ್ ವಿದ್ಯಾರ್ಥಿಯಾಗಿದ್ದೆ ಎಂಬ ಹಮ್ಮೆಯೂ ಇದೆ... ಅದೇ ಬೆಂಚಿನ ಮೇಲೆ ಬರೆದು ಗೀಚಿ ರಚಿಸಿದ ಕೆತ್ತನೆಗಳೆಲ್ಲವೂ ಒಂದೊಂದು ನೆನಪನ್ನು ಸಾರುತ್ತವೆ, ಬರೆದ ಅಕ್ಷರವು ಒಂದು ಗೆರೆಯ ಕಥೆಯಾಗಿದ್ದು, ಚಿತ್ರಗಳು ಇನ್ನೊಂದು ರೂಪನ್ನು ಪಡಕೊಂಡಿದ್ದೂ ಎಲ್ಲವೂ ಅಚ್ಚರಿಯ ಬದಲಾವಣೆಯೇ..ಹೆಚ್ಚೂಕಮ್ಮಿ ನಾ ಉಪಯೋಗಿಸಿದ್ದ ಉತ್ತಮ ಕ್ಯಾನ್ವಾಸ್ ಇದೇ ಆಗಿತ್ತೇನೋ..! ಅಂದಿನಿಂದ ಇಂದಿಗೆ ಅರಿತಿದ್ದು, ಬೆರೆತಿದ್ದು, ಮರೆತದ್ದು, ಕಲಿತಿದ್ದು, ನೋವುಂಡೂ, ನಲಿನಲಿಯುತಾ, ಆಟವಾಡಿ, ಪಾಠಕಲಿತು , ಬದುಕು, ಬವಣೆ, ಅನುಭವಿಸಿದ ನಾನು,ಗಳಿಸಿದ ಸ್ನೇಹಕೆ ಕೃತಜ್ನನಾಗುತ, ಕಳೆದ ಪ್ರೀತಿಗೆ ಕ್ಷಮೆಯ ಕೋರುತ, ಅಂದಿನಿಂದ ಇಂದಿನವರೆಗೂ ಜೊತೆಯಾದ ಎಲ್ಲಾ ಗುರು ಹಿರಿಯರು, ಸ್ನೇಹಿತರು ಸಹಪಾಠಿಗಳಿಗೆ ನನ್ನ ಮನದಾಳದ ನಮನಗಳು.
ಇದೆಲ್ಲಾ ಆ ಮೊದಲ ದಿನದ ನೆನಪು. ಸುಮಧುರ ಸಮ್ಮಿಲನ ,ಕೊನೆಯಾಗುವ ಮೊದಲೇ ನಮ್ಮೆಲ್ಲರ ದೂರ ಮಾಡಿತು ಈ ಹಾಳು ಕೊರೋನಾ... ಮುಂದೆಂದಾದರೂ ಮತ್ತೆ ಸಿಗೋಣಾ, ನಾ ನಿನಗೆ ನೀ ನನಗೆ ಎಂದಿಗೂ ಸಯಾಹಕ್ಕೆ ಮುಂದೆ ಬರೋಣ, ನಮ್ಮ ಸ್ನೇಹವನ್ನು ಕಳೆದ ಕ್ಷಣಗಳನ್ನೂ ಹೀಗೆಯೆ ನೆನಪಾಗಿಸಿ ಮುಂದಿನ ಬದುಕಿನ ಇನ್ನೊಂದು ಹೆಜ್ಜೆಯನ್ನಿಡಲು ಸಜ್ಜಾಗೋಣ....!ಮಾತಿನಲ್ಲಿ ತಪ್ಪಿದ್ದರೆ ಕ್ಷಮೆಯಿರಲಿ, ನಿಮ್ಮೆಲ್ಲರ ಬೆಂಬಲ ನಮ್ಮ ಮೇಲಿರಲಿ.. ಧನ್ಯವಾದಗಳು....
- ಅಭಿಷೇಕ್ ತೀರ್ಥಹಳ್ಳಿ.
Comments